ಶೀನಪ್ಪ ರೈ ಅವರು ಯಕ್ಷಗಾನ ಕಲಾವಿದರು. ಇವರು ೧೯೪೩ರ ಜೂನ್ ೭ರಂದು ಕೊಡಗು ಜಿಲ್ಲೆಯ ಸಂಪಾಜೆ ಎಂಬಲ್ಲಿ ಜನಿಸಿದರು. ಇವರ ತಂದೆ ರಾಮಣ‍್ಣ ರೈ ಹಾಗೂ ತಾಯಿ ಕಾವೇರಿ ರೈ. ಇವರ ತಂದೆ ಸ್ವತಃ ಯಕ್ಷಗಾನ ಕಲಾವಿದರಾಗಿದ್ದರು ಮತ್ತು ಶೀನಪ್ಪ ರೈ ಸಂಪಾಜೆಯವರಿಗೆ ಮಾರ್ಗದರ್ಶಕರಾಗಿದ್ದರು. ೧೩ ಜುಲೈ ೨೦೨೧ರಂದು ನಿಧನರಾದರು. == ಬಾಲ್ಯ ಮತ್ತು ಶಿಕ್ಷಣ == ಇವರು ನಾಲ್ನನೇ ತರಗತಿ ವರೆಗಿನ ಶಿಕ್ಷಣ ಪಡೆದಿದ್ದಾರೆ. ಬಾಲ್ಯದಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡು ತಮ್ಮ ತಂದೆಯವರಿಂದಲೇ ಯಕ್ಷಗಾನ ಕಲೆಯನ್ನು ಅಭ್ಯಸಿಸುತ್ತಾರೆ. ಶೀನಪ್ಪ ರೈ ಅವರು ಅರ್ಥಗಾರಿಕೆಯನ್ನು ತಮ್ಮ ತಂದೆಯವರಿಂದ ಕಲಿತರು. ನಾತ್ಯಾಭ್ಯಾಶವನ್ನು ಶ್ರೀ ಕುಂಬಳೆ ಕಣ್ಣನ್ ಇವರಿಂದ, ಭರತನಾಟ್ಯವನ್ನು ಶ್ರೀ ಮಾಸ್ತರ್ ಕೇಶವರವರಿಂದ ಕಲಿತರು. ಬಣ್ಣಗಾರಿಕೆಯನ್ನು ಶ್ರೀ ಬಣ‍್ಣದ ಕುಟ್ಯಪ್ಪರಿಂದ ಕಲಿತಿದ್ದಾರೆ. == ರಂಗ ಪ್ರವೇಶ == ಇವರು ತಮ್ಮ ೧೩ನೇ ವರ್ಷದಲ್ಲಿ ಶ್ರೀ ಕಲ್ಲಾಡಿ ಕೊರಗ ಶೆಟ್ಟರ ವ್ಯವಸ್ಥಾಪಕತ್ವದ ಇರಾ ಶ್ರೀ ಸೋಮನಾಥೇಶ್ವರ ಕುಂಡಾವು ಮೇಳದಲ್ಲಿ ೪ ವರುಷ ತಿರುಗಾಟ ನಡೆಸಿದ್ದಾರೆ. ೩ ವರ್ಷ ವೇಣೂರು, ೨ ವರ್ಷ ಇರುವೈಲು, ೪ ವರ್ಷ ಸೌಕೂರು, ೨ ವರ್ಷ ಚೌಡೇಶ್ವರಿ ಮೇಳ ನಂತರ ೩೩ ವರ್ಷ ಶ್ರೀ ಕಲ್ಲಾಡಿ ವಿಠಲ ಶೆಟ್ಟಿಯವರ ಸಂಚಾಲಕತ್ವದ ಶ್ರೀ ಕಟೀಲು ದುರ್ಗಾಪರಮೇಶ್ವರಿ ದಶಾವತಾರಿ ಯಕ್ಷಗಾನ ಮಂಡಳಿಯಲ್ಲಿ ಯಕ್ಷಗಾನ ಸೇವೆಯನ್ನು ಮಾಡಿದ್ದಾರೆ. == ನಿರ್ವಹಿಸಿದ ವೇಷಗಳು == ದೇವೇಂದ್ರ, ಕರ್ಣ, ಅರ್ಜುನ, ಹಿರಣ್ಯಾಕ್ಷ, ದಕ್ಷ, ರಕ್ತಬಿಜಾಸುರ, ಇಂದ್ರಜಿತು, ಕೌಂಡ್ಲಿಕ, ಭಾನುಕೋಪ ಶಿಶುಪಾಲ, ಕಾತವೀರ್ಯ, ಅರುಣಾಸುರ, ಭೀಮ, ಮಹಿಷಾಸುರ, ವೀರಮಣೀ, ಶತ್ರುಘ್ನ, ತ್ರಾಮಧ್ವಜ, ಮಕರಾಕ್ಷ ಇತ್ಯಾದಿ ಪಾತ್ರಗಳನ್ನು ಯಕ್ಷಗಾನ ರಂಗದಲ್ಲಿ ನಿರ್ವಹಿಸಿದ್ದಾರೆ. == ಪ್ರಶಸ್ತಿಗಳು == ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ, ೨೦೦೪ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ, ೨೦೦೯ ಜಿಲ್ಲಾ ಮಟ್ಟ್ಟದ ರಾಜ್ಯೋತ್ಸವ ಪ್ರಶಸ್ತಿ, ೨೦೦೩ ಯಕ್ಷಗಾನ ಅಧ್ಯಯನ ಕೇಂದ್ರ ಮಂಗಳೂರು ವಿಶ್ವವಿದ್ಯಾನಿಲಯ- ಯಕ್ಷಮಂಗಳ ಪ್ರಶಸ್ತಿ, ೨೦೧೫ == ಉಲ್ಲೇಖ ==